ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Friday, July 5, 2013

ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮ (ಚಾಮರಾಜನಗರ ಸರ್ಕಾರಿ ಶಾಲೆ)

ಚಾಮರಾಜನಗರ:


ರಾಜ್ಯದ ಹಿಂದುಳಿದ ಹಾಗೂ ಗಡಿ ಜಿಲ್ಲೆ ಚಾಮರಾಜನಗರ. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋದ ನಮಗೆ ಚಾಮರಾಜನಗರದ ಮುಗ್ಧ ಜನರ ಮನಸುಗಳು ಬೇಗ ಹತ್ತಿರವಾದವು. ಅವರೊಡನೆ ಕೂಡಿ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಮನಸು ಬಯಸಿತು. ಎಂಥಾ ಕಾರ್ಯಕ್ರಮಗಳನ್ನು ಅಲ್ಲಿನ ಜನರಿಗೆ ಕೊಡುವುದು??? 

ಕೆಲವು ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಿದೆವು. ಚಾಮರಾಜನಗರದ ದೊಡ್ಡರಾಯಪೇಟೆಯ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡೆವು. ಅಲ್ಲಿ ದೈಹಿಕ ಶಿಕ್ಷಕ ನಾಗರಾಜ್ ಸರ್ ಪರಿಚಯವಾಯಿತು. ಅವರ ಕಳಕಳಿಯ ವ್ಯಕ್ತಿತ್ವ ನಮಗೆ ಹಿತವೆನಿಸಿತು. ಅವರೊಡನೆ ಚರ್ಚಿಸಿದೆವು.  ಎಸ್. ಎಸ್.ಎಲ್.ಸಿ ಪರೀಕ್ಷೆ ಹತ್ತಿರವಿದ್ದ ಕಾರಣ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಒತ್ತಡದಲ್ಲಿ ಸಿಲುಕಿ ಫೇಲ್ ಆಗುವ ಸಂದರ್ಭವನ್ನು ತಪ್ಪಿಸಲು ಹಾಗೂ ಪರೀಕ್ಷೆಯ ಸಿದ್ಧತೆಯನ್ನು ಕುರಿತು ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಕಂಡು ಬಂತು. ಸರಿ ಒಂದು ದಿನದ ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮವನ್ನು ಮಾಡೋಣವೆಂದು ನಿರ್ಧರಿಸಿದೆವು.  

ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮ: (ದೊಡ್ಡರಾಯಪೇಟೆ ವ್ಯಕ್ತಿ ವಿಕಸನ ಕಾರ್ಯಕ್ರಮ)

ಬೆಳಿಗ್ಗೆ ಎದ್ದು ದನ-ಕರುಗಳಿಗೆ ಮೇವು ಹಾಕಿ ಅಪ್ಪ ಅಮ್ಮನ ಜೊತೆ ಹೊಲ-ಗದ್ದೆ ಕೆಲಸ ಮಾಡಿ ಎದ್ದು ಬಿದ್ದು ಓಡಿ ಬರುವ ಗ್ರಾಮೀಣ ಮಕ್ಕಳಿಗೆ 4 ಗೋಡೆಗಳ ಮಧ್ಯೆ ಕುಳಿತು ಪುಸ್ತಕಕ್ಕೆ ಮಸ್ತಕವನ್ನು ಒಡ್ಡಿಕೊಳ್ಳುವುದು ಕಷ್ಟವೇ ಸರಿ. ಬಾಯಿ ಬಿಟ್ಟರೆ ಕೋಲು ಬೀಸುವ ಉಪಧ್ಯಾಯರು. ಉಫ್... ಯಾವಾಗ ಬಿಡ್ತಾರೋ ಬ್ಯಾಗು ಹಿಡಿದು ಮನೆಗೆ ಓಡಿ ಬಿಡೋಣ ಎಂದು ಕಾಯುವ ಮಕ್ಕಳು. ಈ ಮಧ್ಯೆ ಪಿಟಿ (ದೈಹಿಕ ಶಿಕ್ಷಣ)ದ ಹೆಸರಿನಲ್ಲಿ ಸಿಗುವ ಬಿಡುವ ಅವರಿಗೊಂದು ಸಂತೋಷದ ಅವಕಾಶವೇ ಸರಿ. ಗುರುಗಳ ಗರಗಸದಿಂದ ಮೆದುಳನ್ನು ಸ್ವಲ್ಪ ಬಿಡುವಾಗಿ ಇಟ್ಟುಕೊಂಡು ಉಸಿರಾಡುವಂತೆ ಭಾಸವಾಗುತ್ತಾರೆ. 

ಇನ್ನು ಪರೀಕ್ಷೆ ಎಂದರೆ ಬೇಡಪ್ಪಾ.. ಬೇಡ!

ಎಲ್ಲವೂ ನೆನಪಿರುತ್ತೆ ಪರೀಕ್ಷೆ ಬಂತೂ ಅಂದ್ರೆ ಗೊತ್ತಿರೋ ಅಲ್ಪ ಸ್ವಲ್ಪನೂ ಮರೆತು ಹೋಗುತ್ತೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗೋಥರ ಮನೆಪಾಠ ಇರಲಿ. ಶಾಲೆಯಲ್ಲೇ ನೆಟ್ಟಗೇ ಪಾಠ ಸಿಗೋದು ಕಷ್ಟ. ದಿನಕ್ಕೆ 4 ಗಂಟೆ ಕರೆಂಟು ಕೊಟ್ರೇ ಗೋರ್ನಮೆಂಟ್ ಗ್ರೇಟು! ಇಂಥಾ ಸ್ಥಿತಿ ಗ್ರಾಮೀಣ ಭಾಗದ ಮಕ್ಕಳಿಗೆ.

ಬಡತನ, ಮನೆ, ಆಟ ಒತ್ತಡದ ಪಾಠದ ಜಂಜಾಟದಲ್ಲಿ ನಲಿಯುತ ಕಲಿಯೋದು ಹೇಗೆ? ಕಲಿಯೋದನ್ನ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯೋದು ಹೇಗೆ? ಹೀಗೆ ಎಲ್ಲದಕ್ಕೂ ಅವರೊಡನೆ ಸಂವಾದ ನಡೆಸುತ್ತಾ ಇದಷ್ಟರಲ್ಲೇ ಕಾರ್ಯಕ್ರಮವನ್ನು ನಡೆಸಲಾಯಿತು. ಮಕ್ಕಳು ಕಾಳಜಿಯಿಂದ ಭಾಗವಹಿಸಿದರು. 


ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕಾರ್ಯಕ್ರಮ ಯಶಸ್ಸನ್ನು ಕಂಡಿತು.

Thursday, July 4, 2013

'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ಮಾಡುವವರನ್ನು ಒದ್ದೋಡಿಸಿ'


'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ವಿರುದ್ಧದ ಜಾಗೃತಿ ಆಂದೋಲನದ ಬೀದಿನಾಟಕ ಪ್ರದರ್ಶನ'

   


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2010ರ ಚುನಾವಣೆ ಸಂದರ್ಭದಲ್ಲಿ ಹಿಂದಿನ ಚುನಾವಣೆಗಳಂತೆ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಹಣ ಹೆಂಡ ಹಂಚಿ ಜಾತಿ ಧರ್ಮದ ಹೆಸರಿನಲ್ಲಿ ಹಾಗೂ ಸುಳ್ಳು ಆಶ್ವಾಸನೆಗಳ ಕೊಡುವ ಮೂಲಕ  ಮತದಾರರನ್ನು ವಂಚಿಸಿ ಭ್ರಷ್ಟಾಚಾರದ ಮೂಲಕ ಜನರನ್ನು ಲೂಟಿ ಮಾಡುವುದು ಸಾಮಾನ್ಯ

ಈ ಕಾರಣದಿಂದ ಸಾಮಾಜಿಕ ಕಾಳಜಿಯುಳ್ಳ ಜನಾಸ್ತ್ರ ಸಂಘಟನೆಯು ಬೆಂಗಳೂರಿನ ಮತದಾರರನ್ನು ಎಚ್ಚರಿಸಲು ಹಾಗೂ ಜಾಗೃತಿ ಮೂಡಿಸಲು ದಿನಾಂಕ 21.3.2010ರಂದು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಉದ್ಭಾಟನಾ ಕಾರ್ಯಕ್ರಮದ ಮೂಲಕ 'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ಮಾಡುವವರನ್ನು ಒದ್ದೋಡಿಸಿ' ಎಂಬ ಆಂದೋಲನವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಪ್ರಮುಖ ಬಡಾವಣೆ ಹಾಗೂ ಬೀದಿಗಳಲ್ಲಿ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಒಂದು ವಾರ ಮೊದಲೇ ಸಾರ್ವಜನಿಕರ ಪರವಾದ ಒತ್ತಾಯವನ್ನು ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಎದುರು ಜನಪರ ಕಾಳಜಿಯ ಬದ್ಧತೆಯ ಪ್ರತಿಜ್ಞೆ ಸ್ವೀಕಾರಕ್ಕೆ ಆಹ್ವಾನ ನೀಡಲಾಯಿತು.

ರಾಜಕೀಯ ಪಕ್ಷ ಹಾಗೂ ಚುನಾವಣಾ ಅಭ್ಯರ್ಥಿಗಳನ್ನು ಆಹ್ವಾನಿಸಿ ನೀಡಲಾದ ಒತ್ತಾಯಗಳು:


1. ಜನವಿರೋಧಿ ಪೊಳ್ಳು ಯೋಜನೆಗಳನ್ನು ನಿಲ್ಲಿಸಿ ಉತ್ತಮ ಜನಪರ ಯೋಜನೆಗಳ ಮೂಲಕ ನಗರದ ದುಡಿಯುವ ಜನರು, ಬೀದಿ ವ್ಯಾಪಾರಿಗಳು ಹಾಗೂ ಪ್ರಾಣಿ, ಪಕ್ಷಿ, ಗಿಡ ಮರ, ಪರಿಸರ ರಕ್ಷಣೆಗೆ ಮುಂದಾಗಬೇಕು.
2. ಗೂಂಢಾ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡದೇ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
3. ಸೂಕ್ತ ರಕ್ಷಣೆ ಹಾಗೂ ನ್ಯಾಯ ಸಿಗದೇ ಅತ್ಯಾಚಾರ ಕೊಲೆ ಹಲ್ಲೆಗೆ ಒಳಗಾಗುತ್ತಿರುವ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ರಕ್ಷಣೆಗೆ ಮುಂದಾಗಬೇಕು.
4. ಭ್ರಷ್ಟಚಾರ ಮುಕ್ತ ಆಡಳಿತ ನಡೆಸಲು ಬದ್ಧರಾಗಿರಬೇಕು.
5. ಜಾತಿ, ಧರ್ಮದ ಆಧಾರಿತವಾಗಿ ಹಾಗೂ ಹಣ, ಹೆಂಡ, ಸೀರೆ ಇತ್ಯಾಧಿಗಳನ್ನು ನೀಡದೇ ಮತಯಾಚನೆ ಮಾಡಬೇಕು.
6. ಪ್ರಚಾರ ಸಂದರ್ಭದಲ್ಲಿ ನೈತಿಕತೆಯನ್ನು ಪ್ರದರ್ಶಿಸಿ ಆಶ್ವಾಸನೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. & ಆಶ್ವಾಸನೆಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ರಾಜಿನಾಮೆ ನೀಡಲು ಸಿದ್ದರಿರಬೇಕು.
7. ಬಡಜನರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಉಚಿತ ಆರೋಗ್ಯ, ವಸತಿ, ಶಿಕ್ಷಣ ನೀಡಲು ಬದ್ದರಾಗಬೇಕು.
8. ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
9. ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರಿಗೆ ಹಾಗೂ ಅವರ ಹಕ್ಕುಗಳಿಗೆ ಸೂಕ್ತ ರಕ್ಷಣೆ ನೀಡಿ ಗೌರವಿಸಬೇಕು.
10. ಚುನಾವಣಾ ವೆಚ್ಚದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
11. ಪರೀಕ್ಷೆಗಳು ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಚಾರ ಮಾಡಬೇಕು.



ಭ್ರಷ್ಟಾಚಾರ, ಜಾತಿವಾದ, ಜನವಿರೋಧಿ ನೀತಿಗಳಿಗೆ ತಮ್ಮನ್ನು ಮಾರಿಕೊಂಡ ರಾಜಕೀಯ ಪಕ್ಷಗಳು ಈ ಪ್ರತಿಜ್ಞೆಯಲ್ಲಿ ಪಾಲ್ಗೊಳ್ಳುವ ಧೈರ್ಯವನ್ನು ಪ್ರದರ್ಶಿಸಲಿಲ್ಲ. ಕೆಲವು ಸ್ವತಂತ್ರ ಅಭ್ಯರ್ಥಿಗಳು, ಲೋಕಸತ್ತ ಪಕ್ಷದ ಕೆಲವು ಸದಸ್ಯರು ಹಾಗೂ ಜೆಡಿಎಸ್ ನ ನಗರ ಘಟಕದ ಸದಸ್ಯರೊಬ್ಬರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕನಿಷ್ಠ ಪ್ರತಿಕ್ರಿಯೆಯಾದರೂ ಅವರೂ ಸಹ ಅವರು ಪ್ರತಿಜ್ಞೆ ಸ್ವೀಕರಿಸಲು ಸಿದ್ಧರಿರಲಿಲ್ಲ. ಇದು ಚುನಾವಣೆಯಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿತ್ತು.


ಈ ಜನವಿರೋಧಿ ರಾಜಕೀಯ ಪಕ್ಷಗಳ ವಿರುದ್ಧ ಸಾರ್ವಜನಿರಲ್ಲಿ ಜಾಗೃತಿ ಮೂಢಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮತದಾರರು ಸಂಘಟಿತರಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳನ್ನು ಆಶ್ವಾಸನೆಗಳನ್ನು ಲಿಖಿತ ರೂಪದಲ್ಲಿ ಪಡೆಯಬೇಕು. ಪ್ರತಿನಿಧಿಗಳು ಮಾತಿಗೆ ತಪ್ಪಿದ ಸಂದರ್ಭದಲ್ಲಿ ಬೀದಿಗೆ ಇಳಿದು ಛೀಮಾರಿ ಹಾಕುವ ಹಾಗೂ ಅಧಿಕಾರದಿಂದ ಕೆಳಗಿಳಿಸುವ ಕೆಲಸ ಮಾಡಬೇಕೆಂದು ನಗರದ ವಿವಿಧ ಸ್ಲಂಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜುಗಳ ಸುತ್ತ ಬೀದಿನಾಟಕ, ಜಾಗೃತಿ ಹಾಡುಗಳು ಹಾಗೂ ಕರಪತ್ರದ ಮೂಲಕ ಜಾಗೃತಿಯನ್ನು ಮೂಢಿಸಲಾಯಿತು. ಈ ಕಾರ್ಯಕ್ರಮಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮ ಜನ ಮೆಚ್ಚುಗೆಯನ್ನು ಪಡೆಯಿತು.

ನಿಷೇಧಾಜ್ಞೆ ಹೆಸರಿನಲ್ಲಿ ಬಂಧಿಸಲು ಪ್ರಯತ್ನಿಸಿದ ಪೊಲೀಸರು ಜನರ ಛೀಮಾರಿ:


ಸಂಘಟನೆಯು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಆಂದೋಲನಕ್ಕೆ ಲಿಖಿತ ಒಪ್ಪಿಗೆಯನ್ನು ಪಡೆದಿತ್ತು. ಆದರೆ ಚುನಾವಣೆಯ ಕಾರಣದಿಂದಾಗಿ ನಿಷೇದಾಜ್ಞೆಯನ್ನು ಹೇರಲಾಗಿದೆ ಎಂಬ ನೆವ ಹೇಳಿ ಪೊಲೀಸರು ಸಂಘಟನೆಯ ಕಾರ್ಯಕರ್ತರನ್ನು ವಿವಿದೆಡೆ ಬಂಧಿಸಲು ಮುಂದಾಗಿದ್ದರು. ಆ ಎಲ್ಲಾ ಸಂದರ್ಭದಲ್ಲಿ ಸಂಘಟನೆಯ ಜೊತೆಗೆ ಸಾರ್ವಜನಿಕರು ನಮ್ಮ ಬೆಂಬಲಕ್ಕೆ ನಿಂತರು, ವಿಶೇಷವಾಗಿ ಶೇಷಾದ್ರಿಪುರಂ ಕಾಲೇಜ್ ವಿದ್ಯಾರ್ಥಿಗಳು, 'ಅಲ್ರೀ.. ರಾತ್ರಿ ಹೊತ್ತು ಬಾಟ್ಲು ಕೊಡೋಕೆ ಬರೋರನ್ನ ಬಿಟ್ಟು ಜನರಿಗೆ ಒಳ್ಳೇ ವಿಷಯ ಹೇಳೋಕೆ ಬರೋರನ್ನ ಹಿಡಿಯೋಕೆ ಬಂದಿದ್ದೀರಲ್ಲಾ ಹೋಗ್ರೀ' ಎಂದು ಛೀಮಾರಿ ಹಾಕಿ ಕಳುಹಿಸುತ್ತಿದ್ದರು. ಕೆಲವು ಕಡೆ ಪೊಲೀಸ್ ಪೇದೆಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದ್ದರು ಇದು ಸಂಘಟನೆಯ  ಉತ್ತಮ ಕೆಲಸಕ್ಕೆ ಸಿಕ್ಕ ಉತ್ತಮ  ಸಹಕಾರವೇ ಸರಿ :)

ಪಾಲ್ಗೊಂಡ ಸಂಘಟನೆಗಳ ಗಣ್ಯರು: 


ಲೋಹಿಯಾ ವಿಚಾರವಾದಿಗಳು, ಪಿಡಿಎಫ್ ಪ್ರಜಾಪ್ರಭುತ್ವಕ್ಕಾಗಿ ಜನರ ಒಕ್ಕೂಟದ ಪ್ರೊ. ನಗರಗೆರೆ ರಮೇಶ್, ಪಿಯುಸಿಎಲ್ ನ ರಾಮದಾಸ್ ರಾವ್, ಕರ್ನಾಟಕ  ತಮಿಳ್ ಮಕ್ಕಳ್ ಇಯ್ಯಕ್ಕಂನ ಗಣೇಶ್, ನಾಥನ್, ಇತರರು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆಂದೋಲನಕ್ಕೆ ತಮ್ಮ ಸಹಕಾರ ನೀಡಿದರು. 


ಪ್ರಮುಖ ಸುದ್ಧಿ ವಾಹಿನಿಗಳು ಹಾಗೂ ಪತ್ರಿಕೆಗಳು ತಾವು ಸಹ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ ಪ್ರಚಾರವನ್ನು ಒದಗಿಸಿದವು.

ಆಯೋಜನೆ: ಜನಾಸ್ತ್ರ, ಮಹಿಳಾ ಹೋರಾಟ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ನವಯುವಶಕ್ತಿ, ಚೇತನಧಾರೆ ಟ್ರಸ್ಟ್, ಬೆಂಗಳೂರು ಯುವ ಚಾವಡಿ, ಜನಬಿಂಬ ಕಲಾ ತಂಡ ಹಾಗೂ ಇತರ
ಜನಪರ ಸಂಘಟನೆಗಳು.




















ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.
ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ: 9448702368.
                         http://bangaloreslumyouth.blogspot.in/                http://www.swabhimanimahilahorata.blogspot.in/




Sunday, June 16, 2013

'ಸಂತ್ರಸ್ತರನ್ನು ನಿರ್ಲಕ್ಷ್ಯಿಸಿ ನಡೆಸುತ್ತಿರುವ ಕೃಷ್ಣದೇವರಾಯನ ಪಟ್ಟಾಭಿಷೇಕ ವಿರೋಧಿಸಿ ಪ್ರತಿಭಟನೆ' ಹಾಗೂ'ನೆರೆ ಸಂತ್ರಸ್ತರ ಪರಿಹಾರ ನಿಧಿ ಲೆಕ್ಕಪತ್ರವನ್ನು ಬಿಡುಗಡೆ'

'ಸಂತ್ರಸ್ತರ ಬದುಕಿನ ಸಮಾಧಿಯ ಮೇಲೆ ಪಟ್ಟಾಭಿಷೇಕ'

ಸದಾ ಬರದಲ್ಲಿ ಮುಳುಗಿದ್ದ ಉತ್ತರ ಕರ್ನಾಟಕವು ಇಂದು ರಾಜ್ಯ ಕಂಡರಿಯದ ಭೀಕರ ನೆರೆ ಹಾವಳಿಗೆ ಸಿಲುಕಿ ನೂರಾರು ಜನ ಬಲಿಯಾಗಿ ಕೋಟ್ಯಾನು ಕೋಟಿ ಜನರು ಬೀದಿ ಪಾಲಾಗಿದ್ದರು. ರಸ್ತೆಬದಿಗಳಲ್ಲಿ ತಗಡುಗಳನ್ನು ಅಡ್ಡಲಾಗಿಟ್ಟುಕೊಂಡು ಮೈಮೇಲೆ ಸರಿಯಾದ ಬಟ್ಟೆಯಿಲ್ಲದೆ. ಕುಡಿಯಲು ಸರಿಯಾದ ನೀರು ಹಸಿವಿಗೆ ಹಿಡಿ ಅನ್ನ ಸಿಗದೆ ಒದ್ದಾಡುವ ಮಕ್ಕಳು, ವೃದ್ಧರ ಆಕ್ರಂಧನ. ನೆರೆಗೆ ಸಿಕ್ಕಿ ಸತ್ತ ಪ್ರಾಣಿಗಳು ಅಲ್ಲಲ್ಲಿ ಬಿದ್ದು ಕೊಳೆಯುತ್ತಿದ್ದವು. ಅವುಗಳನ್ನು ತಿನ್ನಲು ಹದ್ದು-ಕಾಗೆ, ನಾಯಿಗಳು ಸ್ಪರ್ಧೆಗೆ ಇಳಿದಿದ್ದವು. ಕೊಳೆತ ಶವಗಳ ಮೇಲೆ ನೊಣ ಸೊಳ್ಳೆಗಳು ಸಂಸಾರ ಸ್ಥಾಪಿಸಿ ಸಾಂಕ್ರಾಮಿಕ ರೋಗಗಳನ್ನು ಹಬ್ಬುತ್ತಿದ್ದವು. ಪ್ರತಿನಿತ್ಯ ಜನರು ಕಾಯಿಲೆ, ಹಸಿವುಗಳಿಂದ ಹಿಂಸಾತ್ಮಕವಾದ ಜೀವನ ನಡೆಸುತ್ತಿದ್ದರು.


ನೆರೆಪರಿಹಾರಕ್ಕಾಗಿ ರಾಜ್ಯದ ಜನತೆ, ಕೇಂದ್ರ ಸರ್ಕಾರ ಹಾಗೂ ಇತರೆಡೆಗಳಿಂದ ಬಂದ ಸಾವಿರಾರು ಕೋಟಿ ಸಹಾಯ ಧನವನ್ನು ಸರ್ಕಾರ ನೆರೆಪರಿಹಾರಕ್ಕೆ ಸರಿಯಾಗಿ ನಿರ್ವಹಿಸಲಿಲ್ಲ. ಮನೆ ಆಸ್ತಿ ಬದುಕು ಕಳೆದುಕೊಂಡು ಬೀದಿಗಳಲ್ಲಿ ಬಿಸಿಲು ಮಳೆಗೆ ತತ್ತರಿಸಿ ಅನ್ನ ನೀರು ಇಲ್ಲದೇ, ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಿ ಸಾಯುತ್ತಿದ್ದರೂ ಭ್ರಷ್ಟ ರಾಜ್ಯ ಸರ್ಕಾರವು ಆರೋಗ್ಯ ಹಾಗೂ ಗಂಜಿ ಕೇಂದ್ರಗಳನ್ನೂ ತೆರೆಯದೇ ಅತ್ಯಂತ ನಿರ್ಲಜ್ಜವಾಗಿ ನಡೆದುಕೊಂಡಿತ್ತು.



ಸಾಲದೆಂಬಂತೆ ಗಣಿ ಲೂಟಿಯ ಜರ್ನಾಧನ ರೆಡ್ಡಿಯ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಬದುಕುಗಳ ಸಮಾದಿ ಮೇಲೆ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸಿ ಕೃಷ್ಣದೇವರಾಯನ 500 ಪಟ್ಟಾಭಿಷೇಕವನ್ನು ವಿಜೃಂಭಣೆಯಿಂದ ನಡೆಸುವ ಹೀನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.



ದೇಶ-ವಿದೇಶಗಳಿಂದ ಮೂರು ಸಾವಿರ ಕಲಾವಿದರನ್ನು ಕರೆಸಿದರು. ನಿತ್ಯ ಸರಾಸರಿ ಸಾವಿರ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದು ಕೋಟ್ಯಾಂತರ ರೂಗಳನ್ನು ಹಾಳು ಮಾಡಲಾಯಿತು. ನೆರೆ ಪೀಡಿತರನ್ನು ಕಡೆಗಣಿಸಿ 500 ವರ್ಷಗಳ ಹಿಂದಿನ ರಾಜನೊಬ್ಬನ ಪಟ್ಟಾಭಿಷೇಕದ ಹೆಸರಿನಲ್ಲಿ ಖರ್ಚು ಮಾಡಿತು.  3 ದಿನಗಳ ಕಾಲ ಎಲ್ಲಾ ಮಂತ್ರಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದು ಅಮಾನವೀಯ ನಡತೆಯಾಗಿತ್ತು.

ಇದನ್ನು ಖಂಡಿಸಿ ಜನಾಸ್ತ್ರ ಸಂಘಟನೆಯು ಇತರ ಸಂಘಟನೆಗಳ ಜೊತೆ ಸೇರಿ ಬೆಂಗಳೂರಿನ ಟೌನ್ ಹಾಲ್ ನ ಬಳಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು.

ಸಂಘಟನೆಯ  ಆದಿತ್ಯರವರು ಮಾತಾಡಿ, 'ರಾಜ್ಯ ಸರ್ಕಾರವು ಸಾವು ನೋವಿಗೆ ತುತ್ತಾದ ಉತ್ತರ ಕರ್ನಾಟಕದ ಜನತೆಯನ್ನು ನಿರ್ಲಕ್ಷ್ಯಿಸಿ ಅವರ ನೋವುಗಳಿಗೆ ಸ್ಪಂಧಿಸದೇ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಕೃಷ್ಣದೇವರಾಯ ಪಟ್ಟಾಭಿಷೇಕದ ಹೆಸರಿನಲ್ಲಿ ದರ್ಬಾರ್ ನಡೆಸಲು ಮುಂದಾಗಿರುವುದು ಮಾನಗೇಡಿತನ. ಜನರನ್ನು ಲೂಟಿ ಮಾಡಿ ವಂಶಪಾರಂಪರ್ಯದ ಆಡಳಿತ ದಬ್ಬಾಳಿಕೆಯನ್ನು ಹೇರುತ್ತಿದ್ದ ರಾಜರ ವ್ಯವಸ್ಥೆಯಿಂದ ಮುಕ್ತಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿರುವಾಗ ಕನ್ನಡ ವಿರೋಧಿ ರಾಜನೊಬ್ಬನ 500 ವರ್ಷಗಳ ಪಟ್ಟಾಭಿಕ್ಷೇಕವನ್ನು ನಡೆಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಇದೇ ರೀತಿಯ ತಾರತಮ್ಯ ಮುಂದುವರೆದರೆ ಮುದೊಂದು ದಿನ ಉತ್ತರ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುವುದು ಸ್ಪಷ್ಟ' ಎಂದು ಎಚ್ಚರಿಕೆ ನೀಡಿದರು.

ಸಮಾನತಾ ಮಹಿಳಾ ವೇದಿಕೆಯ ಮಲ್ಲಿಗೆ ಮಾತನಾಡಿ ಕೃಷ್ಣದೇವರಾಯನ ಆಳ್ವಿಕೆ ಜನಪರವಾಗಿರಲಿಲ್ಲ. ಅವನ  ಆಳ್ವಿಕೆಯಲ್ಲಿ ಸುಮಾರು 750 ರೈತ ದಂಗೆಗಳು ಆಗಿರುವುದೇ ಇದಕ್ಕೆ ಉದಾಹರಣೆ. ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ ಸ್ಥಳೀಯರನ್ನು ಹಿಂಸಾತ್ಮಕ ಬದುಕಿಗೆ ತಳ್ಳಿದ ಕೃಷ್ಣದೇವರಾಯನ ಹುಟ್ಟುಹಬ್ಬಕ್ಕೆ ಸರ್ಕಾರ ಅಪಾರ ಹಣವನ್ನು ವ್ಯಯಿಸುತ್ತಿರುವುದು ಹಾಗೂ ನೆರೆಗೆ ಬಲಿಯಾಗಿ ಬೀದಿಪಾಲಾದ  ಉತ್ತರ ಕರ್ನಾಟಕದ ಜನರನ್ನು ನಿರ್ಲಕ್ಷಿಸಿದೆ'  ಎಂದು ಖಂಡಿಸಿದರು.

ಹೃದಯ ಹೀನ ಕ್ರಿಕೆಟಿಗರು


ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ರಾಜ್ಯದ ಜಿಲ್ಲೆಗಳ ಹೆಸರಿನಲ್ಲಿ ಜೂಜು ಆಡಿದ ಕ್ರಿಕೆಟ್ಟಿಗರು ಶೋಕಾಚರಣೆಯನ್ನೂ ಮಾಡದೇ ದುವರ್ತನೆ ತೋರಿದರು. ನಂತರ ರಾಯಲ್ ಚಾಲೆಂಜರ್ಸ್ನ ನಾಯಕ ಅನಿಲ್ ಕುಂಬ್ಳೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿ ಆ ಹಣವನ್ನು ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಅವರ ಆಷಾಡಭೂತಿತನ ಶೀಘ್ರದಲ್ಲೇ ಬಯಲಾಯಿತು. ಅವರಿಂದ ಅಂತಹ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಯತ್ನವೇ ಆಗಲಿಲ್ಲ.



ಬೆಂಗಳೂರಿನಲ್ಲಿ ಐಪಿಎಲ್ 20-20 ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಟಿ ಕೋಟಿ ವ್ಯಯಿಸಿ ಉನ್ಮಾದ ಮೆರೆದ ಕ್ರಿಕೆಟ್ ಸಂಸ್ಥೆಗಳು ಕನಿಷ್ಠ ಆ ಉದ್ಘಾಟನ ಕಾರ್ಯಕ್ರಮವನ್ನು ಸರಳವಾಗಿ ನಡೆಸಿ ಆ ಹಣವನ್ನು  ನೀಡಿದ್ದರೂ ಉತ್ತರ ಕರ್ನಾಟಕದ ಜನತೆಗೆ ಎಷ್ಟೋ ಅನುಕೂಲವಾಗುತ್ತಿತ್ತು. ಅಕ್ಷರಶಃ ಸ್ಮಶಾನದಂತಾಗಿದ್ದ ರಾಜ್ಯದ ರಾಜಧಾನಿಯಲ್ಲಿ ತಮ್ಮ ಪೈಶಾಚಿಕ ವೈಭವವನ್ನು ಮೆರೆದ ಕ್ರಿಕೆಟಿಗರ ರಾಜ್ಯಾಭಿಮಾನದ ನಯವಂಚಕತನ ರಾಜ್ಯದ ಜನತೆಯ ಮುಂದೆ ಬಹಿರಂಗಗೊಂಡಿತು. ತಮಗೆ ಎಲ್ಲವನ್ನೂ ನೀಡಿದ ರಾಜ್ಯದ ಜನತೆ ಬೀದಿಪಾಲಾದಾಗ ತಮ್ಮ ಮೋಜಿನಲ್ಲಿ ಮೈಮರೆತ ಆಟಗಾರರು ಕೂಡಲೇ ಅವರು ಜನತೆಯ ಕ್ಷಮೆಯಾಚಿಸಲಿ ಎಂದು ಛೀಮಾರಿ ಹಾಕಲಾಯಿತು.

'ನೆರೆ ನಿಧಿ ನುಂಗಿದೆಷ್ಟು ಲೆಕ್ಕ ಕೊಡಿ'


ಹಲವಾರು ಮಠಗಳು ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಪರಿಹಾರ ನಿಧಿಯ ಬಗ್ಗೆ ಈವರೆಗೂ ಸಾರ್ವಜನಿಕ ಲೆಕ್ಕಪತ್ರವನ್ನು ಬಿಡುಗಡೆ ಮಾಡದಿರುವುದನ್ನು ಸಂಘಟನೆ ಖಂಡಿಸುತ್ತದೆ. ಈ ಕೂಡಲೇ ನಿಧಿ ಸಂಗ್ರಹಿಸಿದ ಮಠಮಾನ್ಯಗಳು, ಸಂಘ-ಸಂಸ್ಥೆಗಳು ನಿಧಿ ಸಂಗ್ರಹಣೆಯ ವಿವರ ಬಹಿರಂಗ ಪಡಿಸಲು ಸಂಘಟನೆ ಒತ್ತಾಯಿಸಿತು.

ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಿರುವ ಜನರನ್ನು ಹಾಗೂ ಹೈದರಾಬಾದ್ ಕರ್ನಾಟಕವನ್ನು ನಿರ್ಲಕ್ಷ್ಯಿಸುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿತು. ಸರ್ಕಾರವು ಈ ಕೂಡಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಯಾವುದೇ ಭೇದವನ್ನು ತೋರದೇ ಸೂಕ್ತ ಪರಿಹಾರ ನೀಡಬೇಕು. ಪರಿಹಾರದ ಹೆಸರಿನಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ಭ್ರಷ್ಟಾಚಾರವನ್ನು ತಡೆಯಬೇಕೆಂದು ಆಗ್ರಹಿಸಿತು. ಮುಂದಿನ ದಿನಗಳಲ್ಲಿ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದ ಕ್ರಿಕೆಟ್ ಪಟುಗಳು ಹಾಗೂ ಸರ್ಕಾರದ ವಿರುದ್ಧ ಸಂಘಟನೆಯು ರಾಜ್ಯದಾದ್ಯಂತ ಜನರನ್ನು ಸಂಘಟಿಸಿ ಆಂದೋಲನವನ್ನು ರೂಪಿಸಿ ಹೋರಾಟ ಕೈಗೊಳ್ಳುತ್ತದೆ ಎಂಬ  ಉದ್ಘೋಷಣೆಯೊಂದಿಗೆ ಜನಾಸ್ತ್ರ ಸಂಘಟನೆಯು ಪ್ರತಿಭಟನೆಯನ್ನು ಯಶಸ್ವಿಗೊಳಿಸಿತು.

ಉತ್ತರ ಕರ್ನಾಟಕದ  ನೊಂದ ಬಂಧುಗಳಿಗೆ ಸಂಘಟನೆಯು ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿ ವಿನಿಯೋಗಿಸಲು ನೆರೆಪೀಡಿತ ಪ್ರದೇಶಗಳಲ್ಲಿ ಜನಪರ ಸಂಘಟನೆಗಳೊಂದಿಗೆ ಸಮೀಕ್ಷೆ ನಡೆಸಿ 6-11-2009 ರಿಂದ 3ದಿನಗಳು ಸ್ವಯಂಸೇವಕ ತಂಡದೊಂದಿಗೆ ನೆರೆಪೀಡಿತ ಹೆಗ್ಗಸನಹಳ್ಳಿ ಗುರ್ಜಾಪುರ, ಕೋಳೂರು ಹಳೇ ತುಂಗಭದ್ರ ಗ್ರಾಮಗಳಿಗೆ ಪರಿಹಾರ ಹಂಚಲಾಯಿತು. ಸಂಘಟನೆ ಈ ಮೊದಲು ಪತ್ರಿಕಾಗೋಷ್ಠಿ ಕರೆದು ನಿಧಿ ಸಂಗ್ರಹಿಸುವ ಸಂಘ-ಸಂಸ್ಥೆಗಳು, ಮಠಮಾನ್ಯಗಳು ಹಾಗೂ ಸರ್ಕಾರ ಸಾರ್ವಜನಕರಿಗೆ ಪಾರದರ್ಶಕತೆಯನ್ನು ಕಾಪಾಡಲು ಕರೆನೀಡಿತ್ತು. ಸಂಘಟನೆಯು ತನ್ನ ನಿಲುವಿಗೆ ಬದ್ಧವಾಗಿ ಪರಿಹಾರ ನಿಧಿಯ ಲೆಕ್ಕಪತ್ತವನ್ನು ಬಿಡುಗಡೆ ಮಾಡಿತು.

ಸಂಘಟನೆಯ  ಒತ್ತಾಯದ ಫಲವಾಗಿ ಸರ್ಕಾರವು ಲೆಕ್ಕಪತ್ರವನ್ನು ಬಿಡುಗಡೆಗೊಳಿಸಿದ್ದು ಹೋರಾಟಕ್ಕೆ ಸಿಕ್ಕ ಪ್ರತಿಕ್ರಿಯೆಯಾಗಿತ್ತು.

Add caption
ಚೇತನಧಾರೆ ಹಾಗೂ ಜನಾಸ್ತ್ರ ಸಂಘಟನೆಗಳ ಕಾರ್ಯಕರ್ತೆ ಉಷಾರಾಣಿ, ಸಮಾನತಾ ಮಹಿಳಾ ವೇದಿಕೆಯ ಗೀತಾ ಹಾಗೂ ಅಂಬೇಡ್ಕರ್ ನವಯುವ ಶಕ್ತಿಯ ಗೋಪಾಲ್ ರವರು ಬಿಡುಗಡೆಗೊಳಿಸಿದರು. 'ಮಾಲಿನ್ಯವ ದೂರವಿಟ್ಟು ಮಾನವೀಯತೆಯ ದೀಪ ಹಚ್ಚಿ..' ಕಾರ್ಯಕ್ರಮದ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಸಂಘಟನೆಯು ಜವಾಬ್ದಾರಿಯುತವಾಗಿ ಸ್ಪಂಧಿಸಿದ ರಾಜ್ಯದ ಜನತೆಗೆ ಪ್ರೀತಿಯಿಂದ ಅಭಿನಂದಿಸಿತು.

ಕಾರ್ಯಕ್ರಮದಲ್ಲಿ: ಜನಾಸ್ತ್ರ ಸಂಘಟನೆ, ಚೇತನಧಾರೆ ಟ್ರಸ್ಟ್, ಸಮಾನತಾ ಮಹಿಳಾ ವೇದಿಕೆ, ಅಂಬೇಡ್ಕರ್ ನವಯುವ ಶಕ್ತಿ, ಸ್ಲಂ ಜನರ ವೇದಿಕೆ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ, ಪ್ರಜಾತಾರೆ ಪತ್ರಿಕಾವೃಂದದ ಸದಸ್ಯರು ಭಾಗವಹಿಸಿದ್ದರು.





 

Wednesday, June 5, 2013

'ಮಾಲಿನ್ಯವ ದೂರವಿಟ್ಟುಮಾನವೀಯತೆಯ ದೀಪ ಹಚ್ಚಿ '


'ಮಾಲಿನ್ಯವ ದೂರವಿಟ್ಟುಮಾನವೀಯತೆಯ ದೀಪ ಹಚ್ಚಿ'


     ಉತ್ತರ ಕರ್ನಾಟಕವು ಸಂಪೂರ್ಣ ನೆರೆಪೀಡಿತವಾಗಿ ರಾಜ್ಯವು ಸಂಪೂರ್ಣ ಸೂತಕದ ಮನೆಯಾಗಿತ್ತು. ಸಾಮಾಜಿಕ ಕಳಕಳಿ ಹೊಂದಿದ ಜನಾಸ್ತ್ರ ಸಂಘಟನೆಯು 'ಮಾಲಿನ್ಯವ ದೂರವಿಟ್ಟು ಮಾನವೀಯತೆಯ ದೀಪ ಹಚ್ಚಿ..' ಎಂಬ ಕಾರ್ಯಕ್ರಮದ ಅಡಿಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ನಿರ್ಧರಿಸಿತು. ಪತ್ರಿಕಾಗೋಷ್ಠಿ ಹಾಗೂ ಜಾಗೃತಿ ಕಾರ್ಯಕ್ರಮದ ಮೂಲಕ 'ರಾಜ್ಯದ ಜನತೆ ಹಾಗೂ ಸರ್ಕಾರ ಶಬ್ದ, ವಾಯುಮಾಲಿನ್ಯಕ್ಕೆ ಕಾರಣವಾಗುವ ಆಡಂಬರದ ದೀಪಾವಳಿ ಹಾಗೂ ರಾಜ್ಯೋತ್ಸವವನ್ನು ಮಾಡದೇ ಮೋಜಿನ ಕ್ರಿಕೆಟ್ನ್ನು ದೂರವಿಟ್ಟು ನೊಂದ ಬಂಧುಗಳ ನೆರವಿಗೆ ಧಾವಿಸಬೇಕು. ಸರ್ಕಾರ 73ನೇ ಕನ್ನಡದ ಸಾಹಿತ್ಯ ಸಮ್ಮೇಳನವನ್ನು ಕೂಡಲೇ ಮುಂದೂಡಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ತಲುಪಿಸಬೇಕು. ರಾಜ್ಯ ಸರ್ಕಾರ  ಜನ ಪ್ರತಿನಿಧಿಗಳು, ಮಠಗಳು ಸಂಘ-ಸಂಸ್ಥೆಗಳು ತಾವು ಪರಿಹಾರಧನದ ಹೆಸರಿನಲ್ಲಿ ಸಾರ್ವಜನಿಕರಿಂದ ಪಡೆದ ಹಣ ಇನ್ನಿತರ ನಿಧಿಯ ಬಗ್ಗೆ ಸಾರ್ವಜನಿಕವಾಗಿ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಪಾರದರ್ಶಕತೆಯನ್ನು ಕಾಪಾಡಬೇಕು.' ಮನವಿ ಮಾಡಿತು. ವಿವಿಧ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. 

ನಿಧಿ ಸಂಗ್ರಹಣೆ: 

ದಿನಾಂಕ: 18-10-09ರಂದು ಭಾನುವಾರ ಬೆಂಗಳೂರಿನ 1. ಮಹಾಲಕ್ಷ್ಮೀಲೇಔಟ್ ಈಜುಕೊಳ 2. ರಾಜಾಜಿನಗರ 1ನೇ ಬ್ಲಾಕ್ ವೃತ್ತ 3. ರಾಜಾಜಿನಗರ ನವರಂಗ್ ವೃತ್ತ 4. ಯಶವಂತಪುರ ಗಾಯಿತ್ರಿ ದೇವಾಲಯದ ವೃತ್ತ 5. ರಾಜಾಜಿನಗರ ಭಾಷ್ಯಂ ಸರ್ಕಲ್  6. ಶಂಕರ ಮಠ ವೃತ್ತ 7. ಡಾ.ರಾಜ್ಕುಮಾರ್ ಸಮಾಧಿ ಈ ಕೇಂದ್ರಗಳಲ್ಲಿ ಸಂಜೆವರೆಗೆ ಸಾರ್ವಜನಿಕರಿಂದ ಹಣ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿಲಾಯಿತು. 

ಸಂತಾಪ ಸೂಚಕ ಕಾರ್ಯಕ್ರಮ: ನಂತರ ಸಂಜೆ 5.30ಕ್ಕೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಅತಿವೃಷ್ಟಿಯಲ್ಲಿ ಮಡಿದ ನಾಗರೀಕ ಬಂಧುಗಳಿಗೆ ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಸಂತಾಪ ಸೂಚಿಸಲಾಯಿತು. ಕಾರಣಾಂತರಗಳಿಂದ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಕೋ.ಚನ್ನಬಸಪ್ಪ ಹಾಗೂ ಜಯಂತ್ ಕಾಯ್ಕಣಿಯವರ ಗೈರು ಹಾಜರಿಯಲ್ಲಿ ಪಿಯುಸಿಎಲ್ನ ಅಧ್ಯಕ್ಷರಾದ ಪ್ರೊ. ರಾಮದಾಸ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಜನಪರ ವೇದಿಕೆಯ ಕುಮಾರ್ ಸಮತಳರವರು ತಮ್ಮ ರಾಯಚೂರಿನ ಪ್ರವಾಸದ ಅನುಭವವನ್ನು ಹಂಚಿಕೊಂಡರು. ಹಿರಿಯರಾದ ರಾಮಸ್ವಾಮಿ, ಟಿ.ಆರ್.ನರ್ಮದಾರವರು ಇನ್ನಿತರ ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಜನತೆಯ ಪ್ರತಿಕ್ರಿಯೆ: 

ಜನಾಸ್ತ್ರ ಹಾಗೂ ಇನ್ನಿತರೆ ಸಂಘಟನೆಗಳ ಮನವಿಯ ಫಲವಾಗಿ ರಾಜ್ಯದ ಜನತೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದರು. ಹಲವು ರೀತಿಯಲ್ಲಿ ತಮ್ಮ ನೆರವು ನೀಡಿದ್ದ ಜನತೆ ಸ್ವಪ್ರೇರಿತರಾಗಿ ಸಂಘಟನೆಗೆ ತಮ್ಮ ಅಮೂಲ್ಯವಾದ ಕಾಣಿಕೆಗಳನ್ನು ನೀಡಿದರು. ಪತ್ರಿಕಾಗೋಷ್ಠಿ ನಡೆಸಿದ 2ನೇ ದಿನಕ್ಕೆ ಸಕರ್ಾರವು ಎಲ್ಲಾ ನಿಧಿ ಸಂಗ್ರಹಣೆಯೂ ಕಾನೂನು ಬದ್ಧಗೊಳಿಸಲು ಆದೇಶ ಹೊರಡಿಸಿದರು. ಇದು ಈ ನಿಟ್ಟಿನಲ್ಲಿ ಆಗಬಹುದಾಗಿದ್ದ ಹೆಚ್ಚಿನ ಭ್ರಷ್ಟಾಚಾರವನ್ನು ಕಡಿಮೆಗೊಳಿಸಿತ್ತಾದರೂ ರಾಜ್ಯದ ಜನತೆ ಸರ್ಕಾರಕ್ಕೆ ಸಲ್ಲಿಸಿದ ಸಾವಿರಾರು ಕೋಟಿ ನಿಧಿ ಸಂತ್ರಸ್ತರಿಗೆ ಇನ್ನೂ ತಲುಪದಿರುವುದು ವಿಪರ್ಯಾಸವೇ ಆಗಿದೆ.

ಸಂಘಟನೆಯು ಪುಟ್ಟದಾಗಿ ಸಂಗ್ರಹಿಸಿದ ಹಣ 29.628/- ಈ ಸಣ್ಣ ಮೊತ್ತವನ್ನು ಹೇಗೆ ಸಂತ್ರಸ್ತರಿಗೆ ತಲುಪಿಸುವುದು ಎಂದು ಯೋಚಿಸಿ ಕರ್ನಾಟಕ ಜನಪರ ವೇದಿಕೆ ಹಾಗೂ ಇತರ ಸಂಘಟನೆಗಳೊಂದಿಗೆ ಒಟ್ಟಾಗಿ ಕಾರ್ಯಕ್ರಮ ರೂಪಿಸಲಾಯಿತು. ಮೊದಲು ಹೆಚ್ಚಿನ ಹಾನಿಗೊಳಗಾದ ರಾಯಚೂರಿನ 'ಹೆಗ್ಗಸನಹಳ್ಳಿ ಗುಜರ್ಾಪುರ, ಕೋಳೂರು, ಹಳೇ ತುಂಗಭದ್ರ ಗ್ರಾಮ'ಗಳನ್ನು ಗುರುತಿಸಿ ಸಮೀಕ್ಷೆ ಮೂಲಕ ಅಲ್ಲಿನ ಜನರ ಅಗತ್ಯವನ್ನು ಗುರುತಿಸಲಾಯಿತು. ಸುಮಾರು 15ದಿನಗಳವರೆಗೆ ಹಣದ ಜೊತೆಗೆ ಹಲವಾರು ಹಿತೈಷಿಗಳಿಂದ ದಿನನಿತ್ಯದ ವಸ್ತುಗಳು ಹಾಗೂ ಬಟ್ಟೆಗಳನ್ನು ಸಂಗ್ರಹಿಸಲಾಯಿತು. ಈ ಗ್ರಾಮಗಳಿಗೆ ಅನುಕೂಲವಾಗುವಂತೆ 720 ಪ್ಯಾಕ್ಗಳನ್ನು ಮಾಡಲಾಯಿತು. (ಪ್ರತೀ ಪ್ಯಾಕ್ನಲ್ಲಿ ಸೀರೆ, ಪಂಚೆ, ಟವಲ್, ಪ್ಯಾಂಟ್, ಸ್ವೆಟರ್ ಹಾಗೂ ಬೆಡ್ ಶೀಟ್ ಇರುವಂತೆ) ಹೆಚ್ಚಿನವುಗಳನ್ನು ಹೊಸದಾಗಿ ಕೊಳ್ಳಲಾಯಿತು. 
  

ನೊಂದ ಮನಸುಗಳ ಹಾದಿಯಲ್ಲಿ...

ಪರಿಹಾರ ವಸ್ತುಗಳನ್ನು ವಿತರಿಸಲು ಎಲ್ಲಾ ಸಂಘಟನೆಗಳ ಕಾರ್ಯಕರ್ತರೂ ಒಳಗೊಂಡ ತಂಡದೊಂದಿಗೆ ಇವುಗಳನ್ನು ತೆಗೆದುಕೊಂಡು ನವೆಂಬರ್ 6ರ ರಾತ್ರಿ ಬೆಂಗಳೂರಿನಿಂದ ಹೊರಟು ರಾಯಚೂರು ತಲುಪಿದೆವು. 

1. ಹೆಗ್ಗಸನಹಳ್ಳಿ: 

ರಾಯಚೂರಿನ ಶಕ್ತಿನಗರದ ಪಕ್ಕದ ಹೆಗ್ಗಸನಹಳ್ಳಿ ನಾವು ಪರಿಹಾರ ಸಾಮಗ್ರಿ ತಲುಪಿಸಿದ ಮೊದಲ ಊರು. ಈ ಹಳ್ಳಿ ಕೃಷ್ಣಾ ನದಿ ಹತ್ತಿರವಿದೆ. ಇಲ್ಲಿ ನೀರು ನುಗ್ಗಿರುವ ರಭಸಕ್ಕೆ ಬೆಂಗಳೂರು, ದೆಹಲಿ ರೈಲು ಮಾರ್ಗವೇ ಸಂಪೂರ್ಣ ಕಿತ್ತುಹೋಗಿದೆ. 

2. ಗುರ್ಜಾಪುರ: 

ಎರಡನೆಯದು ರಾಯಚೂರು ತಾಲೂಕಿನದ್ದೇ ಮತ್ತೊಂದು ಹಳ್ಳಿ ಗುರ್ಜಾಪುರ. ಈ ಹಳ್ಳಿಗೆ ಕೃಷ್ಣಾ ನದಿ ನೀರಿನ ಜೊತೆ ಮತ್ತೊಂದು ಹಳ್ಳದ ನೀರು ಎರಡೂ ಸೇರಿ ಸಾಕಷ್ಟು ಹಾನಿ ಮಾಡಿವೆ. 

3. ಕೋಳೂರು: 

ನಾವು ಹೋದ ಮೂರನೆಯ ಊರು ಕೋಳೂರು. ಇದು ದೇವದುರ್ಗ ತಾಲೂಕಿನ ಅಂಚಿನಲ್ಲಿರುವ ಹಳ್ಳಿ. ಈ ಹಳ್ಳಿಯ ಸುತ್ತಲೂ ಎರಡು ಹಳ್ಳಗಳು ಸರ್ಪದಂತೆ ಸುತ್ತಿಕೊಂಡಿದ್ದು ಸಾಕಷ್ಟು ತೊಂದರೆಯಲ್ಲಿದ್ದಾರೆ. ಸಮೀಪದ ಗಬ್ಬೂರು ಮತ್ತು ರಾಯಚೂರಿಗೆ ಬರಲು ಇವತ್ತಿಗೂ ಸೇತುವೆಯಿಲ್ಲ. ಕೋಳೂರು ಹೆಚ್ಚು ಕಡಿಮೆ ಸಂಪೂರ್ಣ ನಾಶವಾಗಿದೆ. ಕೆಲವೆಡೆ ಮನೆಯಿತ್ತು ಎಂಬ ಗುರುತೂ ಸಹ ಉಳಿದಿಲ್ಲ. 

4. ಹಳೇ ತುಂಗಭದ್ರ ಗ್ರಾಮ: 

ಕೊನೆಯದಾಗಿ ತುಂಗಭದ್ರ ನದಿಯ ತಟದಲ್ಲಿರುವ ಹಳೇ ತುಂಗಭದ್ರ ಗ್ರಾಮ. ಈ ಊರಿನಲ್ಲಿ ಒಂದು ಮನೆಯೂ ಉಳಿದಿಲ್ಲ. ಎಲ್ಲವೂ ಸಂಪೂರ್ಣ ನಾಶವಾಗಿದೆ. ಪಾತ್ರೆ ಇತ್ಯಾದಿ ಏನೂ ಉಳಿದುಕೊಂಡಿಲ್ಲ. ಮನೆಗಳ ಸಂಖ್ಯೆ: ಈ ಊರಿನ ಪಕ್ಕದಲ್ಲೇ ತುಂಗಭದ್ರಾ ನದಿಗೆ ಕಟ್ಟಿರುವ ದೊಡ್ಡ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ. ನದಿಯ ಆ ಕಡೆಯ ಆಂಧ್ರ ಭಾಗದಲ್ಲಿ ನಾಲ್ಕು ಕಿ.ಮೀ. ದೂರದಲ್ಲಿ ಮಂತ್ರಾಲಯ ಬರುತ್ತದೆ. ಅಲ್ಲಿನ ಸ್ವಾಮೀಜಿಯನ್ನು ಹೆಲಿಕಾಪ್ಟರ್ನಲ್ಲಿ ಹೊತ್ತುಕೊಂಡು ಬಂದು, ಮಂತ್ರಾಲಯದ ಪುನರ್ ನಿರ್ಮಾಣಕ್ಕೆ ಕೋಟಿಯನ್ನು 3 ದಿನದಲ್ಲೇ ಘೋಷಿಸಿದ ರಾಜ್ಯ ಸರ್ಕಾರ, ನಾವು ಹೋಗುವವರೆಗೂ ಹಳೇ ತುಂಗಭದ್ರಾ ಗ್ರಾಮಕ್ಕೆ ಅಂತಹ ಯಾವ ಭರವಸೆಯನ್ನೂ ನೀಡಿರಲಿಲ್ಲ. ಸಂಪೂರ್ಣ ಮನೆ ನಾಶವಾದರೆ ನೀಡುವ 37 ಸಾವಿರ ರೂ. ಈ ಊರಿನ ಒಂದು ಮನೆಗೂ ತಲುಪಿಲ್ಲ. ಈ ಚಿಕ್ಕ ಊರಿನ ಎಲ್ಲಾ ಕುಟುಂಬಗಳಿಗೆ ಬಟ್ಟೆ, ಬೆಡ್ಶೀಟ್ ಪ್ಯಾಕ್ ಜೊತೆ ಪಾತ್ರ್ರೆಗಳನ್ನೂ ಹಂಚಲಾಯಿತು. 

ದುಡಿದ ಕೈಗಳಿಗೆ ಸಾಸಿವೆ: 

ಸರ್ಕಾರದ ಮೇಲೆ ನಂಬಿಕೆಯಿಲ್ಲದೆ, ನೇರವಾಗಿ ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವವರಿಗೆ ಮಾತ್ರ ಕೊಡಬೇಕು ಎಂದುಕೊಂಡಿದ್ದ ನಮ್ಮ ಕರೆಗೆ ಜನ ಉತ್ತಮ ರೀತಿ ಪ್ರತಿಕ್ರಿಯಿಸಿದ್ದರು. ಅದರಂತೆಯೇ ಈ ಪರಿಹಾರ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಊರುಗಳಲ್ಲಿದ್ದ ಸಂಘಟನೆಯ ಕೆಲವು ಪ್ರಾಮಾಣಿಕ ಕಾರ್ಯಕರ್ತರು ಯಾವುದೇ ಗೊಂದಲಗಳಿಲ್ಲದೆ ಪರಿಹಾರ ಸಾಮಗ್ರಿ ವಿತರಣೆಯಾಗಲು ವ್ಯವಸ್ಥೆ ಮಾಡಿದ್ದರು. 

ನಾಡು ಕಟ್ಟಿದ ಜನರ ಸಂಕಷ್ಟಕ್ಕೆ ಸ್ಪಂಧಿಸುವುದು ಎಲ್ಲರ ಜವಾಬ್ದಾರಿ ಎಂದು ಪ್ರಜ್ಞೆಯನ್ನು ಬೆಳೆಸಲು ಸಂಘಟನೆ ಯಶಸ್ವಿಯಾಗಿದೆ. ನಾಡಿನ ಏಳ್ಗೆಗೆ ದುಡಿಯುದ ಕೈಗಳಿಗೆ ಸಿಕ್ಕಿರುವುದು ಸಾಸಿವೆಯಷ್ಟು ನೆರವು. ಅದೂ ಸಹ ಶೂನ್ಯವೇ ಸರಿ. 
''ಸರ್ಕಾರದಿಂದ ನಮಗೇನೂ ಸಿಕ್ಕಿಲ್ಲ. ಮನೆಗಳು ಪೂರ ಕೊಚ್ಚಿ ಹೋಗಿದ್ದರೂ ಸಿಕ್ಕಿರುವ ಪರಿಹಾರ ಹೆಚ್ಚೆಂದರೆ 2ರಿಂದ 7 ಸಾವಿರ ರೂ.ಗಳ ಚೆಕ್' ಎಂದು ಬಹುತೇಕ ಎಲ್ಲೆಡೆ ಜನರು ಹೇಳುತ್ತಿದ್ದರು. ಅದೇ ಸಂದರ್ಭದಲ್ಲಿ ಅವರ ನೆರವಿಗೆ ನಿಂತು ಸಹಾಯ ಹಸ್ತವನ್ನು ನೀಡಿದ ರಾಜ್ಯದ ಇತರ ಭಾಗಗಳ ಜನತೆ ಮತ್ತು ಸಂಘ ಸಂಸ್ಥೆಗಳನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದರು.

ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆಯ ಕಾವು:

  ರೈತರು ಹಾಗೂ ಉತ್ತರ ಕರ್ನಾಟಕ ಜನರ ನೇತೃತ್ವದಲ್ಲಿ  'ನೆರೆ ಸಂತ್ರಸ್ತರ ಸಮಿತಿ' ಸ್ಥಾಪಿಸಿ ನಮ್ಮ ಸಮಿತಿಯಿಂದ   ಪತ್ರಿಕಾಗೋಷ್ಠಿ ನಡೆಸಿ 'ಸತ್ಯಶೋಧನಾ ವರದಿ'ಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯೊಂದಿಗೆ ಸೇರಿ ಪ್ರತಿಭಟನಾ ರಾಲಿ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.



     
ನಾಡಿನ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ನೀಡಿರುವ ಉತ್ತರ ಕರ್ನಾಟಕದ ಜನತೆಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲದಾಗಿದೆ. ನೆರವಿಗೆ ಬಾರದ ಸರ್ಕಾರಕ್ಕೆ ಶಾಪ ಹಾಕುತ್ತಿದ್ದರು. ಜನರ ಸಂಕಷ್ಟ ಸ್ಥಿತಿ ಮನ ಕಲಕುವಂತಿತ್ತು. ಜನ ಪ್ರತಿನಿಧಿಗಳು ಮನುಷ್ಯತ್ವ ಮರೆತು ವರ್ತಿಸಿದ್ದಾರೆ. 

ಪ್ರಕೃತಿಯ ವಿಕೋಪ ಮತ್ತು ಸರ್ಕಾರಗಳ ನಿರ್ಲಕ್ಷ್ಯಗಳೆರಡೂ ಸೇರಿ ಈ ಭಾಗದ ಜನಜೀವನವನ್ನು ಕೆಲ ದಶಕಗಳಷ್ಟು ಹಿಂದಕ್ಕೆ ತಳ್ಳಿದೆ. ಹಾಗಾಗಿ ಕನರ್ಾಟಕದ ಅತ್ಯಂತ ಹಿಂದುಳಿದ ಭಾಗವಾದ ಈ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಗಳು ನಡೆಯಬೇಕಿದೆ. ಬೆಂದ ಮನೆಯಲ್ಲಿ ಗಳ ಹಿಡಿಯುತ್ತಿರುವ ಇಲ್ಲಿನ ರಾಜಕಾರಣಿಗಳು ಅಂತಹ ಪ್ರಯತ್ನ ತಮ್ಮಂತೆ ತಾವೇ ಮಾಡುತ್ತಾರೆಂಬ ಯಾವ ಭರವಸೆಯೂ ಇಲ್ಲ. ಈ ನಿಟ್ಟಿನಲ್ಲಿ ನಾಡಿನ ಪ್ರಜ್ಞಾವಂತ ಜನತೆ ಮತ್ತು ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಒತ್ತಡ ತರುವ ಕೆಲಸವನ್ನು ಮಾಡಬೇಕಿದೆ.

 ವಿಶೇಷ ಅಭಿನಂದನೆಗಳು: 

ಕಿರ್ಲೋಸ್ಕರ್ ಫೌಂಡ್ರಿಯ, ಗೌತಮ ಕಾಲೋನಿ ಹಾಗೂ ಮಹಾಲಕ್ಷ್ಮೀಪುರ ನಿವಾಸಿಗಳು ಮೊದಲೇ ಹಲವಾರು ರೀತಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದರೂ ನಮ್ಮ ಸಂಘಟನೆ ಮನೆ ಬಾಗಿಲಿಗೆ ಹೋದಾಗ ಬರೀ ಕೈಯಲ್ಲಿ ಹಿಂತಿರುಗಿಸದೇ ತಮ್ಮ ಕಾಣಿಕೆ ಹಾಗೂ ಬೆಂಬಲಕ್ಕೆ ನಾವು ಸದಾ ಋಣಿಗಳು. ಪಿಯುಸಿಎಲ್ನ ಪ್ರೋ. ರಾಮದಾಸ್ ರಾವ್, ವೆಂಕಟಸ್ವಾಮಿಯವರು, ಜನಪರ ವೇದಿಕೆಯ ಕುಮಾರ್ ಸಮತಳ ಹಾಗೂ ವಿಶೇಷವಾಗಿ ಸಂಗ್ರಹಿಸಲಾದ ವಸ್ತುಗಳನ್ನು ಜೋಡಿಸಿಕೊಳ್ಳಲು ಸ್ಥಳಾವಕಾಶ ಹಾಗೂ ಬೆಂಬಲ ನೀಡಿದ ವಿವೇಕ್ ಮೆಮೋರಿಯಲ್ ಟ್ರಸ್ಟ್ನ ಟಿ.ಆರ್.ನರ್ಮದಾರವರಿಗೆ ಧನ್ಯವಾದಗಳು. ಹೆಗಲಿಗೆ ಹೆಗಲು ನೀಡಿದ ಸಮಾನತಾ ಮಹಿಳಾ ವೇದಿಕೆ, ಕರ್ನಾಟಕ ಜನಪರ ವೇದಿಕೆ, ಗೌರಿ ಲಂಕೇಶ್ ಬಳಗ, JOIN US TO HELP, ಪೆಡೆಸ್ಟ್ರಿಯನ್ ಪಿಕ್ಚರ್ಸ್, ಮಂಡ್ಯನಗರ ಸ್ಲಂ ನಿವಾಸಿಗಳ ಒಕ್ಕೂಟ, ಮಂಡ್ಯ ರೈಲ್ವೆ ಗೂಡ್ಶೆಡ್ಸ್ ಕಾರ್ಮಿಕರ ಸಂಘ, ಮಂಡ್ಯ ಕೆ.ಎಸ್.ಡಿ.ಎಲ್. ಕಾರ್ಮಿಕರ ಸಂಘ. ಹಾಗೂ ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಹೃದಯ ತುಂಬಿ ಅಭಿನಂದನೆಗಳನ್ನು ಅಪರ್ಿಸುತ್ತೇವೆ. 




ಹೆಚ್ಚಿನ ಮಾಹಿತಿಗೆ:


ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ: 9448702368.
                         http://bangaloreslumyouth.blogspot.in/                http://www.swabhimanimahilahorata.blogspot.in/